Wednesday, April 24, 2013

"ನನ್ನ ತಮ್ಮ" ಎನ್ನುವ ಆಟೋ "ರಾಜ" ನ ಕುರಿತು

ಆ ವ್ಯಕ್ತಿ ಅದೆಷ್ಟು ಎತ್ತರಕ್ಕೆ ಬೆಳೆದು ಬಿಟ್ಟಾ ?
ನಿಜವಾಗಲು ಅಂತಹವರಿಗೆ ಅಷ್ಟೊಂದು ಆತುರವಾದರೂ ಏನಿರುತ್ತೆ ಅಂತ?
ದೇವರಿಗೆ ಅವರ ಮೇಲೆ ಆ ಪರಿಯ  ಪ್ರೀತಿಯಾದ  ಯಾದರೂ ಏಕಿರಬಹುದು?
ಇನ್ನೊಂದು ಐವತ್ತು ವರ್ಷ  ಆಯುಷ್ಯ ಹಾಕಿದ್ದರೆ ದೇವರ ಗಂಟು ಏನಾದ್ರೂ ಹೋಗುತ್ತಿತ್ತೆ?
ಕೆಲಸಕ್ಕೆ ಬಾರದವರಿಗೆಲ್ಲ ಬೇಕಾದಷ್ಟು ಆಯುಷ್ಯ ಕೊಡುವ ದೇವರು .. ಇಂತಹವರಿಗೆ ಮಾತ್ರ ಯಾಕೆ ರಿಯಾಯತಿ ಕೊಡುವುದಿಲ್ಲ?
ಬಹುಶ ಆ  ವ್ಯಕ್ತಿ ಬೆಳೆಯುವ ಪರಿ ನೋಡಿ ಆ ದೇವರಿಗೂ ಸಹ ಒಂದು ಕ್ಷಣ ಹೊಟ್ಟೆ ಕಿಚ್ಚು ಆಗಿರಬಹುದೇನೋ?


ಆತ ಇರುವುದೇ ಹಾಗೆ.....
ಮುಖದ ಮೇಲೆ ದಾಡಿ ಇಟ್ಟುಕೊಂಡೇ  ಚಿತ್ರ ರಂಗಕ್ಕೆ ಬಂದ. ಮೊದಲ ಚಿತ್ರಕ್ಕೆ ರಾಷ್ಟ್ರ ಮನ್ನಣೆಯೂ ಸಿಕ್ಕಿತು. ಆತ ನಡೆದಾಡುತ್ತಾ ಡೈಲಾಗ್ ಹೇಳುತ್ತಿದ್ದರೆ, ಆತನಿಗೆ ಗೊತ್ತಿಲ್ಲದಂತೆಯೇ ಆತ ಕೈ, ಗೋಡೆ ಗಡಿಯಾರದ ಪೆಂಡುಲಂ ತರಹ ಆಕಡೆ ಈ ಕಡೆ ಚಲಿಸುತ್ತಿತ್ತು.  ಸ್ವಲ್ಪ ತುಟಿ ಬಿಗಿ ಹಿಡಿದು ಮಾತನಾಡುವ ಆತನ ಶೈಲಿಗೆ ಮರುಳಾಗದವರಿಲ್ಲ.....
ಅದರಲ್ಲೂ ಆತನದು ಖಾಕಿ ಪಾತ್ರಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವ.
ಖಾಕಿ ಖದರಿನ ಪೋಲಿಸು ದಿರಿಸು, ಕಣ್ಣಿಗೆ ಕಪ್ಪಾದ ಕನ್ನಡಕ, ಒಂದು ಕೈಯಲ್ಲಿ ಲಾಠಿ ಹಿಡಿದು, ಮತ್ತೊಂದು ಕೈಯನ್ನು  ಪೆಂಡುಲಂ ಥರ ಚಲಿಸುತ್ತಾ ಆತ ನಡೆದಾಡುವ ಚಿತ್ರ ತೆರೆಯ ಮೇಲೆ ಬಂದರೆ ಸಾಕು,
" ಅಬ್ಬಾ, ಪೋಲಿಸು ಅಂದ್ರೆ ಹಿಂಗಿರಬೇಕ್ರಿ!!" ಅಂತ ಅಂದುಕೊಂಡ ವರೆಷ್ಟೋ?
ಅದೇ ಗಾಂಭಿರ್ಯದಿಂದ ಆತ ಕೇಡಿ ಗಳ ಮುಂದೆ ಬಂದು ನಿಂತು; 
" ನೀವು ಚಾಪೆ ಕೆಳಗೆ ನುಗ್ಗಿದರೆ, ಈ ಸಾಂಗ್ಲಿಯಾನ ರಂಗೋಲಿ ಕೆಳಗಡೆ ನುಗ್ತಾನೆ! ದ್ಯಾಟ್  ಇಸ್ ಸಾಂಗ್ಲಿಯಾನ!!"
ಅನ್ನುವ ಡೈಲಾಗ್ ಹೊಡೆದರೆ, ಚಿಂತ್ರಮಂದಿರದ ಚಾವಣಿಯೆ ಹಾರಿ ಹೋಗುವಷ್ಟು ಸಿಳ್ಳೆ, ಚಪ್ಪಾಳೆ.... 
ಇಷ್ಟು ಹೊತ್ತಿಗಾಗಲೇ ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಅಂತ ನಿಮಗಾಗಲೇ ಗೊತ್ತಾಗಿರುತ್ತದೆ, ಹಾಗೇನೆ ಯಾವ ಪುಸ್ತಕ ಕುರಿತು ಹೇಳಲು ಹೊರಟಿದ್ದೇನೆ ಅನ್ನುವುದು ಸಹ.... 
ಹೌದು, ಎಂದು ಮಾಸದ ಆ ಚೈತನ್ಯ ದ ಹೆಸರು " ಶಂಕರ್ ನಾಗ್!!". 
ಈ ಅಂಕಣ ದಲ್ಲಿ ನಾನು ಹೇಳ ಹೊರಟಿರುವುದು " ನನ್ನ ತಮ್ಮ ಶಂಕರ... " ಪುಸ್ತಕದ ಬಗ್ಗೆ.
ಈ ಪುಸ್ತಕವನ್ನು ಬರೆದಿರುವವರು ಬೇರೆ ಯಾರು ಅಲ್ಲ, ದಕ್ಷಿಣ ಭಾರತದ ಅದ್ಭುತ ನಟ ಹಾಗು ಶಂಕರ್ ನಾಗ್ ಅವರ ಅಣ್ಣ 
"ಅನಂತ್ ನಾಗ್". 

ಈ ಪುಸ್ತಕ ಒಂದು ರೀತಿಯಲ್ಲಿ ಶಂಕರ್ ನಾಗ್ ಅವರ ಬಯಾಗ್ರಫಿ ಅಂದರೆ ತಪ್ಪಿಲ್ಲ.ಓದಬೇಕಾದರೆ ಪುಸ್ತಕದ ಪ್ರತಿ ಪುಟವೂ ಇಷ್ಟು ಬೇಗ ಮುಗಿದು ಹೋಯಿತಾ ಅನಿಸುತ್ತದೆ. ಪ್ರತಿ ಪುಟವನ್ನು ಓದುವಾಗಲು ಕನಿಷ್ಠ ಐದು ಸಲವಾದರೂ ಶಂಕರ್ ನಾಗ್ ಅವರ ಮುಖ ನಮ್ಮ ಕಣ್ಣ ಮುಂದೆ ಬಂದು ಹೋಗುತ್ತದೆ. ಮನಸ್ಸು ತೀರ ಖಾಲಿ ಖಾಲಿ ಅನಿಸುವುದು ಕೊನೆಯ ಐದು ಪುಟಗಳನ್ನು ಓದುತ್ತಿರುವಾಗ.ನಿಜ ಹೇಳಬೇಕೆಂದರೆ ಆ ಐದು ಪುಟಗಳನ್ನು ಓದಲು ಮನಸೇ ಬರುವುದಿಲ್ಲ.ನಮ್ಮ ಅತಿ ಹತ್ತಿರದವರ ಒಬ್ಬರನ್ನು ಕಳೆದು ಕೊಂಡುಬಿಟ್ಟೆವೆನೊ ಅನಿಸುತ್ತದೆ. ಎದೆ ಭಾರವಾಗಿ ಪುಸ್ತಕ ಒಂದು ತೊಟ್ಟು ಕಣ್ಣಿರು ತರಿಸಿದರೂ ಆಶ್ಚರ್ಯವಿಲ್ಲ! 

ನಿಜ, ದೇವರಿಗೆ ಆ ಚೇತನದ ಬಗ್ಗೆ ಅಸೂಯೆಯೇ ಆಗಿರಬೇಕು....ಆ  ಆಯಾಸವಿಲ್ಲದ ಜೀವನ ಕಂಡು .... 
ಚಿಕ್ಕ ವಯಸಿನಲ್ಲೇ ಭಾರತೀಯ ಚಿತ್ರರಂಗದ ಮೇರು ನಟನ ಚಿತ್ರ ವನ್ನು ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿದ್ದು ಮತ್ತು ಆ ಚಿತ್ರದ ಕೆಲ ಭಾಗಗಳನ್ನು ಸಮುದ್ರ ದ ಆಳದಲ್ಲಿ ಚಿತ್ರೀಕರಿಸಿದ್ದು, "ಮಾಲ್ಗುಡಿ ಡೇಸ್" ಅನ್ನುವ ಸುಪ್ರಸಿದ್ದ  ಧಾರವಾಹಿ ಯಿಂದ ಕರ್ನಾಟಕದ ಕಲಾವಿದರನ್ನೆಲ್ಲ ಭಾರತಕ್ಕೆ ಪರಿಚಯಿಸಿದ ಹೆಮ್ಮೆ, ಸಂಕೇತ್ ಸ್ಟುಡಿಯೋ ದ ಸ್ಥಾಪನೆ, ಕಂಟ್ರಿ ಕ್ಲಬ್ ನ ಪ್ರಾರಂಭಿಸುವ ಹೊಣೆ, ನಂದಿ ಬೆಟ್ಟಕ್ಕೆ ಪ್ರವಾಸಿಗರನ್ನು ಸೆಳೆಯುವ ಹೊಸ ಯೋಜನೆ, ತಮ್ಮ ಸ್ವಂತ ದುಡ್ಡಿನಲ್ಲೇ ವಿದೇಶಕ್ಕೆ ಹೋಗಿ ಅಲ್ಲಿರುವ ಮೆಟ್ರೋ ರೈಲು ಗಳ ಬಗ್ಗೆ ತಿಳಿದು ಕೊಂಡು ೮೦ ರ ದಶಕದಲ್ಲೇ ಬೆಂಗಳೂರಿನಲ್ಲಿ ಮೆಟ್ರೋ ರೈಲಿನ ಕನಸು... 
ಒಂದೇ ಎರಡೇ... ನಿಜವಾಗಲು ದೇವರಿಗೆ ಹೊಟ್ಟೆ ಕಿಚ್ಚು ಆಗಿರಬೇಕು....

ಶಂಕರ್ ನಾಗ್ ಅವರನ್ನು ಕೇವಲ ಚಿತ್ರದ ಮೂಲಕ ಮಾತ್ರ ತಿಳಿದಿದ್ದ ನಮ್ಮ ಪೀಳಿಗೆ ಯವರಿಗೆ ಅವರನ್ನೊಂದು ಸ್ಪೂರ್ತಿ ಯಾಗಿ ತೆಗೆದು ಕೊಳ್ಳುವಂತೆ ಮಾಡಿದ ಪುಸ್ತಕದ ಕರ್ತೃ ವಾದ ಅನಂತನಾಗ್ ಅವರಿಗೆ ನಮ್ಮ ಧನ್ಯವಾದಗಳನ್ನು ಅರ್ಪಿಸಲೇಬೇಕು... 

ಅಂಕಣ ಮುಗಿಸುವ ಮುನ್ನ
ನೀವು ಬೆಂಗಳೂರಿನ ರಸ್ತೆಯಲ್ಲಿ ವಾಹನವೊಂದರಲ್ಲಿ ಚಲಿಸುವಾಗ ಸಡನ್ ಆಗಿ ನಿಮ್ಮ ವಾಹನ ವನ್ನ ಎಡಗಡೆ ಹಾಗು ಬಲಗಡೆ ಯಿಂದ ಮೂರ್ನಾಲ್ಕು ಆಟೋ ಗಳು ಒಟ್ಟಿಗೆ ಓವರ್ ಟೆಕ್ ಮಾಡುತ್ತವೆ. ನಿಮಗೆ ಸಿಟ್ಟು ನೆತ್ತಿಗೇರುತ್ತದೆ. ತಕ್ಷಣವೇ ನಿಮ್ಮ ತುಟಿಯ ಮೇಲೆ ಒಂದು ಅಭಿಮಾನದ ನಗೆಯು ತೇಲಿ ಬರುತ್ತದೆ, ಯಾಕಂದರೆ " ಆ ನಾಲ್ಕು ಆಟೋದ ಹಿಂದೆ ಶಂಕರ್ ನಾಗ್ ಅವರ ಚಿತ್ರ ಇರುತ್ತದೆ". 

ಅಭಿಮಾನದ ನಿಜವಾದ "ಸಂಕೇತ" ಅಂದರೆ "ಶಂಕ್ರಣ್ಣ" ಅಲ್ಲವೇ?